ಮೊದಲನೆಯದಾಗಿ ಅದು ಬುದ್ಧಿ ಕಲಿಯುವ ದೇಶವೇ ಅಲ್ಲ. ಹಾಗಂತ ತೀರ್ಮಾನಿಸಬಹುದಾದರೂ ಅದಕ್ಕೊಂದು ಬುದ್ಧಿ ಕಲಿಸದೇ ಹೋದರೆ ನಮಗೆ ಅಪಾಯ ತಪ್ಪಿದ್ದಲ್ಲ. ಆದರೆ ಸಮಸ್ಯೆ ಇರುವುದು ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದಾದರೂ ಹೇಗೆ ? ಹಿಂದೆ ಇಲಿಗಳೆಲ್ಲಾ ಸೇರಿಕೊಂಡು ಬೆಕ್ಕಿಗೆ ಗಂಟೆ ಕಟ್ಟಿದ್ದವಂತೆ. ಆದರೆ ಈಗ ಭಾರತದಂತ ಬೆಕ್ಕೇ ಪಾಕಿಯಂತಹ ಇಲಿಗೆ ಗಂಟೆ ಕಟ್ಟುವುದು ಹೇಗಪ್ಪಾ ಎಂದು ಯೋಚಿಸುವಂತಾಗಿದೆ. ಇದು ದುರಂತ.
ಅದೊಂತರ ಮಡಿಲೊಳಗಿನ ಗೊಣಗಲು ಮುಳ್ಳಿನ ಪೊದೆಯಂತೆ, ನಾವು ಅಲ್ಲಾಡಿದರೂ ಚುಚ್ಚುತ್ತೆ, ಅದೇ ಅಲ್ಲಡಿದರೂ ಚುಚ್ಚುತ್ತೆ. ಪಕ್ಕದ ಮನೆಯಲ್ಲೆ ಹುಚ್ಚು ಮುಂಡೇಮಕ್ಕಳಿದ್ದರೆ ಎಷ್ಟು ತೊಂದರೆಯೋ ಅಷ್ಟೇ ತೊಂದರೆ ಈ ಪಾಕಿಸ್ತಾನದಿಂದ. ಸಧ್ಯಕ್ಕೆ ಕಾಶ್ಮೀರ ಭಯೋತ್ಪಾದನೆ ಕಡಿಮೆ ಆಗಿದೆ. ಅಲ್ಲಿ ವಿರೋಧದ ನಡುವೆಯೂ ಮಿಲಿಟರಿ ಬಿಗಿಗೊಂಡದ್ದು ಒಂದು ಕಾರಣವಾದರೆ ಅಫ್ಘನಿಸ್ತಾನದ ಭಯೋತ್ಪಾದಕರನ್ನು ಅಮೆರಿಕ ಬಗ್ಗು ಬಡಿದದ್ದೂ ಕಾರಣವಿರಬಹುದು. ಆದರೂ ಗಡಿಯಲ್ಲಿನ ತಂಟೆ ಇನ್ನೂ ನಿಂತಿಲ್ಲ.
ಪಾಕಿಸ್ತಾನವು ಭಾರತದೊಂದಿಗೆ ಕಾಲು ಕೆರೆದು ಜಗಳ ತೆಗೆಯುವುದಕ್ಕೆ ಹಲವಾರು ಕಾರಣವಿದೆ. ತನಗೆ ಒಳಗೊಳಗೆ ತುರಿಕೆಯಾದಾಗೆಲ್ಲ ಅದನ್ನು ತುರಿಸಿಕೊಳ್ಳುವುದನ್ನು ಯಾರೂ ನೋಡಬಾರದು ಎಂಬ ಕಾರಣಕ್ಕೆ ಅದು ಇತ್ಲಾಗೆ ಒಂದು ಕಲ್ಲು ಎಸೆದು ಪ್ರಪಂಚದ ದಿಕ್ಕು ತಪ್ಪಿಸುವ ಯತ್ನವನ್ನು ಮಾಡುತ್ತಲೇ ಬರುತ್ತಿದೆ. ಅದು ಅದರ ಕರ್ಮ, ಆದರೆ ಅದರಿಂದ ತೊಂದರೆಗೆ ಒಳಗಾಗುತ್ತಿರುವುದು ಮಾತ್ರ ನಾವೆ. ಹಾಗಂತೆ ಎಷ್ಟು ಅಂತ ಸಹಿಸುವುದು ? ಎಲ್ಲಾ ತಾಳ್ಮೆಗಳಿಗೂ ಒಂದು ಕೊನೆಯಿದ್ದೇ ಇರುತ್ತದೆ. ಭಾರತದ ತಾಳ್ಮೆಗೆ ಕೊನೆ ಇದೆಯೋ ಇಲ್ಲವೋ ಗೊತ್ತಿಲ್ಲ.
ಏಕಾಏಕಿ ಅದರ ಮೇಲೆ ಯುದ್ಧ ಸಾರಿ ಅದನ್ನು ಹೊಸಕಿ ಹಾಕಿಬಿಡಬೇಕು ಎಂದು ಕೆಲವರು ಹೇಳುತ್ತಿರುತ್ತಾರೆ. ಒಂದು ರೀತಿ ಯೋಚಿಸಿದರೆ ಅದು ಸರಿ ಅನ್ನಿಸಲೂ ಬಹುದು. ಆದರೆ ಒಂದೇ ಸಲಕ್ಕೆ ಹೊಸಕಿ ಹಾಕಿ ಬಿಡಲು ಸಾಧ್ಯವೇ ? ಕಂಡಿತಾ ಇಲ್ಲ. ಪಾಕಿಸ್ತಾನಿಯರು ತಿನ್ನಲಿಕ್ಕೆ ಕೂಳಿಗೆ ಗತಿ ಇಲ್ಲವೆಂದರೂ ಬೇಕಾದಷ್ಟು ಆಯುಧ, ಆಣುಬಾಂಬ್ಗಳನ್ನು ತಯಾರಿಸಿಟ್ಟು ಕೊಂಡಿದ್ದಾರೆ. ಅದು ಭಾರತ ದಾಳಿ ಮಾಡಿ ಬಿಡುತ್ತದೆ ಅನ್ನುವ ಭಯಕ್ಕಲ್ಲ, ತಾವೇ ಯಾವಾಗಲಾದರೂ ಸಮಯ ಸಿಕ್ಕರೆ ಭಾರತದ ಮೇಲೆ ದಾಳಿ ಮಾಡಲಿಕ್ಕೆ. ಇಂತಹ ಕ್ಷುದ್ರ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಭಾರತ ಗೆಲ್ಲುವುದು ಕಷ್ಟವೆಂದೇನಲ್ಲ, ಆದರೆ ಅದರಿಂದ ಪಾಕಿಸ್ತಾನ ನಿರ್ವಂಶವಾಗಿಯೇ ಹೋಗಬಹುದು... ಆದರೆ ಭಾರತವೂ ಅಂಗಾಂಗಗಳನ್ನು ಊನವಾಗಿಸಿಕೊಳ್ಳಬೇಕಾಗುತ್ತದೆ. ಮತ್ತೊಂದು ಅಪಾಯ ಚೀನಾದ್ದು. ಇತ್ತ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿರುವಂತೆಯೇ ಚೀನಾ ಅದರ ಬೆಂಬಲಕ್ಕೆ ನಿಲ್ಲುತ್ತದೆ. ಭಾರತದ ಗೆಳೆಯ ರಷ್ಯಾ ಮೊದಲಿನಷ್ಟು ಸಧೃಡವಾಗಿಲ್ಲ, ಅಮೆರಿಕವನ್ನು ನೆಚ್ಚಿಕೊಳ್ಳುವಂತಿಲ್ಲ. ಆಗ ಭಾರತ ಏಕಾಂಗಿಯಾಗಬೇಕಾದೀತು. ನಾವು ಎಷ್ಟೇ ಮಿಲಿಟರಿ ಸಾಮರ್ಥ್ಯ ಹೊಂದಿದ್ದರೂ ಚೀನಾವನ್ನು ಬಗ್ಗು ಬಡಿಯು ಸಾಮರ್ಥ್ಯ ನಮಗಿಲ್ಲ. ಇದು ಪಾಕಿಸ್ತಾನದ ಮೇಲೆ ಭಾರತವು ದಂಡೇಳದಂತೆ ತಡೆದಿರುವ ಅನೇಕ ಕಾರಣಗಳಲ್ಲಿ ಒಂದು. ನಮ್ಮ ಒಂದು ಕಣ್ಣು ಹೋದರೆ ಹೋಗಲಿ, ಪಾಕಿಸ್ತಾನದ ಎರಡೂ ಕಣ್ಣು ತೆಗೆಯೋಣ ಎಂದು ಹೊರಡುವುದು ಮೂರ್ಖತನವಾದೀತು.
ಹಾಗಾದರೆ ಭಂಡ ಪಾಕಿಸ್ತಾನಕ್ಕೆ ಬುದ್ಧಿ ಕಲಿಸೋದಾದರೂ ಹೇಗೆ ? ಇದನ್ನು ಮುಳ್ಳನ್ನು ಮುಳ್ಳಿನಿಂದಲೇ ತೆಗೆವ ದಾರಿಯಲ್ಲೇ ಮಾಡಬಹುದು. ಈಗಾಗಲೇ ಪಾಕಿಸ್ತಾನದ ಬಲುಚಿಸ್ತಾನದಲ್ಲಿ ಅಲ್ಲಿನ ಭಯೋತ್ಪಾದಕರು ಕ್ರಿಯಾಶೀಲರಾಗಿದ್ದು ಪಾಕಿಸ್ತಾನಕ್ಕೆ ತಲೆನೋವಾಗಿದ್ದಾರೆ. ಭಾರತ ಅನುಸರಿಸ ಬೇಕಾಗಿರುವುದು "ಶತ್ರುವಿನ ಶತ್ರು ಮಿತ್ರ" ಎಂಬ ನಾಣ್ನುಡಿಯನ್ನು. ಅಂದರೆ ಬಲೂಚಿಸ್ತಾನದ ಭಯೋತ್ಪಾದಕರಿಗೆ ಯಥೇಚ್ಚವಾಗಿ ಧನ ಸಹಾಯ ಮಾಡುವ ಮೂಲಕ ಪಾಕಿಸ್ತಾನಕ್ಕೆ ತೊಂದರೆ ಕೊಡುವುದಷ್ಟೇ ಈಗಿರುವ ಮಾರ್ಗ. ಈಗಾಗಲೇ ಭಾರತವು ಅಂತಹ ಕಾರ್ಯವನ್ನು ಮಾಡುತ್ತಿರಬಹುದು. ಏಕೆಂದರೆ ಭಾರತದಲ್ಲಿ ಪಾಕಿಸ್ತಾನ ಪ್ರೇರಿತ ದಾಳಿಗಳು ನಡೆದ ನಂತರವೆಲ್ಲಾ ಬಲುಚಿಸ್ತಾನದಲ್ಲಿ ಅಲ್ಲಿನ ಭಯೋತ್ಪಾದಕರಿಂದ ಪಾಕಿಸ್ತಾನದ ಮೇಲೆಯೇ ದಾಳಿಗಳಾಗಿವೆ.
ಭೂಮಿಗೆ ಅಪ್ಪಳಿಸಲು ಬರುವ ಕ್ಷುದ್ರ ಗ್ರಹವೊಂದನ್ನು ತಡೆಯಲು ವಿಜ್ಞಾನಿಗಳು ಇಲ್ಲಿಂದ ರಾಕೇಟ್ ಕಳಿಸಿ ಢಿಕ್ಕಿ ಹೊಡೆಸಿ ಅದರ ದಿಕ್ಕು ತಪ್ಪಿಸುವಂತೆಯೆ ಪಾಕಿಸ್ತಾನದ ಕ್ಷುದ್ರ ಶಕ್ತಿಯನ್ನು ದಿಕ್ಕು ತಪ್ಪಿಸಬೇಕಾಗಿದೆ. ಅದನ್ನು ಭಾರತ ಸರ್ಕಾರವು ಯಶಸ್ವಿಯಾಗಿ ನಡೆಸಲಿ ಎಂದು ಆಶಿಸೋಣ
ಕಾಮೆಂಟ್ಗಳು